‘ಬಡವರ ಪಾಲಿಗೆ ಮೋದಿ ಆರೋಗ್ಯ ಯೋಜನೆಗಳೇ ಸಂಜೀವಿನಿ- kore
’
ಹಣವಿಲ್ಲದೆ ಆಸ್ಪತ್ರೆಯತ್ತ ಮುಖಮಾಡದ ಕಾಲ ಬದಲಾಗಿದೆ: ಡಾ. ಪ್ರಭಾಕರ ಕೋರೆ.
ವೈದ್ಯಕೀಯ ಕಾಲೇಜುಗಳು 300ರಿಂದ 500ಕ್ಕೆ ಏರಿಕೆ •
ಹಿಂದುಳಿದ ರಾಜ್ಯಗಳಿಗೂ ‘ಏಮ್ಸ್’ • ಆರೋಗ್ಯವಂತ ಯುವಶಕ್ತಿಯೇ ಸದೃಢ ಭಾರತದ ಅಡಿಪಾಯ
(Ebelagavi)
ಹುಬ್ಬಳ್ಳಿ: ‘
ಹಣವಿಲ್ಲದೆ ಬಡವರು ಆಸ್ಪತ್ರೆಗೆ ಹೋಗಲು ಹೆದರುತ್ತಿದ್ದರು. ಚಿಕಿತ್ಸೆ ಪಡೆಯಲಾಗದೆ ಜೀವ ಬಿಡುವ ಪರಿಸ್ಥಿತಿಯೂ ಇತ್ತು. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಆರೋಗ್ಯ ಯೋಜನೆಗಳು ದೇಶದ ಆ ಚಿತ್ರಣವನ್ನೇ ಬದಲಿಸಿವೆ. ಬಡವರು ಮತ್ತು ಮಧ್ಯಮ ವರ್ಗದವರಿಗೂ ಈಗ ಉತ್ತಮ ಚಿಕಿತ್ಸೆಯ ಭರವಸೆ ದೊರೆತಿದೆ’ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಕೆಎಲ್ಇ ಸಂಸ್ಥೆಯ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. , ಮೋದಿ ಸರ್ಕಾರದ ಆರೋಗ್ಯ ಯೋಜನೆಗಳು ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ವಿಸ್ತರಣೆಯನ್ನು ಮುಕ್ತಕಂಠದಿಂದ ಅವರು ಶ್ಲಾಘಿಸಿದರು.

‘
ದೇಶದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಬೇಕು ಎಂಬ ಸಂಕಲ್ಪದಿಂದ ಪ್ರಧಾನಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳ ನೆರವಿನಿಂದ ಬಡವರು ಮಾತ್ರವಲ್ಲ, ಮಧ್ಯಮ ವರ್ಗದ ಕುಟುಂಬಗಳಿಗೂ ದುಬಾರಿ ಚಿಕಿತ್ಸೆಯನ್ನು ಪಡೆಯುವ ಧೈರ್ಯ ಬಂದಿದೆ. ಆರೋಗ್ಯವಂತ ಯುವಜನಾಂಗವೇ ಆರೋಗ್ಯವಂತ ಭಾರತವನ್ನು ನಿರ್ಮಿಸಬಲ್ಲದು ಎಂಬುದು ಮೋದಿ ಅವರ ದೂರದೃಷ್ಟಿ’ ಎಂದರು.

‘300 ಇದ್ದ ಕಾಲೇಜುಗಳು 500 ದಾಟಿವೆ’
‘ನರೇಂದ್ರ ಮೋದಿ
ಪ್ರಧಾನಿಯಾಗುವುದಕ್ಕೂ ಮೊದಲು ದೇಶದಲ್ಲಿ ಸುಮಾರು 300 ವೈದ್ಯಕೀಯ ಕಾಲೇಜುಗಳಿದ್ದವು. ಈಗ ಅವುಗಳ ಸಂಖ್ಯೆ 500ನ್ನು ಮೀರಿದೆ. ಹಿಂದೆ ದೆಹಲಿಗೆ ಸೀಮಿತವಾಗಿದ್ದ ಏಮ್ಸ್ ಮಾದರಿಯ ಅತ್ಯುನ್ನತ ವೈದ್ಯಕೀಯ ಸಂಸ್ಥೆಗಳು ಇಂದು ಹಿಂದುಳಿದ ರಾಜ್ಯಗಳಿಗೂ ತಲುಪಿವೆ. ದೇಶದ ವಿವಿಧ ಭಾಗಗಳಲ್ಲಿ ಸುಮಾರು 12 ಏಮ್ಸ್ಗಳನ್ನು ಸ್ಥಾಪಿಸಿದ ಶ್ರೇಯಸ್ಸು ಮೋದಿ ಅವರಿಗೆ ಸಲ್ಲಬೇಕು’ ಎಂದು ಪ್ರತಿಪಾದಿಸಿದರು.
‘ಹಣದ ಕೊರತೆಯಿಂದ ಯಾರೂ ಚಿಕಿತ್ಸೆ ವಂಚಿತರಾಗಬಾರದು ಎಂಬುದು ಪ್ರಧಾನಿಯವರ ಆಶಯ. ಅವರು ಜಾರಿಗೆ ತಂದ ಯೋಜನೆಗಳು ಆರೋಗ್ಯ ಸೇವೆಯನ್ನು ಶ್ರೀಮಂತರ ಸೌಲಭ್ಯವಾಗಿ ಉಳಿಸದೆ, ಸಾಮಾನ್ಯರ ಹಕ್ಕಾಗಿ ಪರಿವರ್ತಿಸಿವೆ’ ಎಂದು ಬಣ್ಣಿಸಿದರು.
ಕೆಎಲ್ಇಗೆ ಮೋದಿ ಕೊಟ್ಟ ‘ಮೂರು ಟಾಸ್ಕ್’

ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬೆಳಗಾವಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಸಂಸ್ಥೆಯ ಮುಂದಿಟ್ಟಿದ್ದ ಮೂರು ಗುರಿಗಳನ್ನು ಕೋರೆ ನೆನಪಿಸಿಕೊಂಡರು.
ಒಂದು: ಕೆಎಲ್ಇ ದೇಶದ ಪ್ರಮುಖ ಸಂಶೋಧನಾ ಕೇಂದ್ರವಾಗಬೇಕು
ಎರಡು: ಸಂಸ್ಥೆಯ ವಿದ್ಯಾರ್ಥಿಯೊಬ್ಬ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು
ಮೂರು: ಕೆಎಲ್ಇ ವಿಶ್ವವಿದ್ಯಾಲಯ ವಿಶ್ವದ ಅಗ್ರ 50ರಲ್ಲಿ ಸ್ಥಾನ ಪಡೆಯಬೇಕು.
‘ಅಮೆರಿಕದ ಸಂಸ್ಥೆಗಳ ಸಹಯೋಗದಲ್ಲಿ ಬೆಳಗಾವಿಯ ಆಸ್ಪತ್ರೆಯಲ್ಲಿ ಸಂಶೋಧನಾ ಕೇಂದ್ರವನ್ನು ರೂಪಿಸುತ್ತಿದ್ದೇವೆ. ಒಲಿಂಪಿಕ್ಸ್ಗೆ ವಿದ್ಯಾರ್ಥಿಯನ್ನು ಕಳುಹಿಸುವ ಪ್ರಯತ್ನ ಮುಂದುವರಿದಿದೆ. ವಿಶ್ವದ ಅಗ್ರ 50ರಲ್ಲಿ ಇನ್ನೂ ಸ್ಥಾನ ದೊರೆತಿಲ್ಲ. ಆದರೆ ದೇಶದ ಅಗ್ರ 50 ವಿಶ್ವವಿದ್ಯಾಲಯಗಳಲ್ಲಿ ಕೆಎಲ್ಇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ’ ಎಂದರು.
₹700 ಕೋಟಿಯ ಆರೋಗ್ಯ ‘ಮಹಾಸೌಧ’
ಹೊಸ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗಾಗಿ ಕೆಎಲ್ಇ ಸಂಸ್ಥೆ ₹700 ಕೋಟಿ ವೆಚ್ಚ ಮಾಡಿದೆ. ಕೃತಕ ಬುದ್ಧಿಮತ್ತೆ ಆಧಾರಿತ ವೈದ್ಯಕೀಯ ಶಿಕ್ಷಣ ಸೇರಿದಂತೆ ಭವಿಷ್ಯದ ಅಗತ್ಯಗಳಿಗೆ ತಕ್ಕ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕೋರೆ ತಿಳಿಸಿದರು.
1,200 ಹಾಸಿಗೆಗಳ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗಾಗಿ 300 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಕೆಎಲ್ಇ ಸಂಸ್ಥೆಯ ವಿವಿಧ ಆಸ್ಪತ್ರೆಗಳು ಒಟ್ಟಾರೆ 5,500 ಹಾಸಿಗೆ ಸಾಮರ್ಥ್ಯ ಹೊಂದಿವೆ. ಈವರೆಗೆ 1.30 ಕೋಟಿಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 14 ಹೃದಯ, 30 ಯಕೃತ್ತು ಹಾಗೂ 131 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.
‘ಆರೋಗ್ಯ ಸೇವೆಗೆ ಮೋದಿ ಹೊಸ ದಿಕ್ಕು’

‘
ಆಸ್ಪತ್ರೆಗೆ ಹೋಗಲೂ ಸಾಧ್ಯವಾಗದೆ ಬಡವರು ಜೀವ ಕಳೆದುಕೊಳ್ಳುತ್ತಿದ್ದ ಕಾಲವಿತ್ತು. ಪ್ರಧಾನಿ ಮೋದಿ ಅವರ ಯೋಜನೆಗಳಿಂದ ಇಂದು ಬಡವರು ಮತ್ತು ಮಧ್ಯಮ ವರ್ಗದವರಿಗೂ ಚಿಕಿತ್ಸೆಯ ಬಾಗಿಲು ತೆರೆದಿದೆ. ಆರೋಗ್ಯವಂತ ಯುವಜನಾಂಗವನ್ನು ರೂಪಿಸಿ, ಆರೋಗ್ಯವಂತ ಭಾರತ ನಿರ್ಮಿಸುವುದು ಅವರ ಕನಸು.’
-ಪದ್ಮಶ್ರೀ ಡಾ. ಪ್ರಭಾಕರ ಕೋರೆ, ಗೌರವ ಕಾರ್ಯಾಧ್ಯಕ್ಷ, ಕೆಎಲ್ಇ ಸಂಸ್ಥೆ




Comments